ಶ್ರೀ ಕ್ಷೇತ್ರದ ಹಿನ್ನಲೆ ಪುರಾಣ:

43 ವರ್ಷಗಳ ಇತಿಹಾಸವಿರುವ ಈ ಹಿನ್ನಲೆಯಲ್ಲಿ, ಗುಲ್ವಾಡಿಯಲ್ಲಿ ವಾಸವಾಗಿದ್ದ ಮರ್ಲಣ್ಣ ಹಾಗೂ ಅವರ ಸಂಸಾರ ಕೂಡ್ಲು ಬಾಡಬೆಟ್ಟಿನ ಸ್ವಾಮಿ ದೇವರ ಕೂಡ್ಲು ಹತ್ತಿರದ ಕಾಡು ಪ್ರದೇಶದಲ್ಲಿ ನೆಲೆನಿಂತ ಮದಗದ ಬಳಿ ಇರುವ ಕಿರಿದಾದ ಕೊಳವೆಯ ನೀರನ್ನು ಕುಡಿಯಲು ಹಾಗೂ ದಿನನಿತ್ಯದ ಬಳಕೆಗೆ ಉಪಯೋಗಿಸುತ್ತಿದ್ದರೆನ್ನಲಾದ ಆ ಜಾಗದಲ್ಲಿ ದಿನನಿತ್ಯವೂ ಬಲವಾದ ಸರ್ಪವೊಂದರ ಸಂಚಾರವಾಗುತ್ತಿತ್ತು. ತನ್ನಡೀ; ಸಂಚಾರದಡೀ ಎಲ್ಲಿಯಾದರೂ ಅಶುಚಿ-ಮಲಿನತೆ ಕಂಡುಬಂದಾಗಲೆಲ್ಲಾ ಯಾರಿಗೂ ಆ ನೀರನ್ನು ಕೊಂಚ ಸ್ಪರ್ಶಿಸಲು ಕೂಡ ಬಿಡುತ್ತಿರಲಿಲ್ಲವಾಗಿತ್ತು. ಹಾಗಾಗಿ, ನಾಗದೋಷಕ್ಕೆ ಗುರಿಯಾಗಬಾರದೆನ್ನುವ ಕಾರಣಕ್ಕೇ ಜನ ತಗ್ಗಿ-ಬಗ್ಗಿ ನಡೆದು ಆದಷ್ಟು ಆ ಜಾಗವನ್ನು ಶುಚಿಯಾಗಿರಿಸುತ್ತಿದ್ದರು.ಇಷ್ಟರಲ್ಲಿಯೇ, ಇಲ್ಲಿಯೇ ಸಮೀಪ ವಾಸ್ತವ್ಯ ಹೂಡಿದ್ದ ಮರ್ಲಣ್ಣ ಎನ್ನುವವರು ತೆಂಗು ಬಾಳೆ-ಅಡಿಕೆ ಇತ್ಯಾದಿಗಳನ್ನು ಬೆಳೆಸಿ ತಮ್ಮ ಕೃಷಿಯೇತರ ಉದ್ಯೋಗವನ್ನಾಗಲೇ ಶುರುಮಾಡಿದ್ದ ಕೆಲವೇ ವರ್ಷಗಳಲ್ಲಿ ಅವರು ಅನಾರೋಗ್ಯಕ್ಕೆ ತುತ್ತಾದರು. ಧೈರ್ಯಗುಂದದೇ, ಸಕಲ ದೇವಾನು-ದೇವತೆಯರಿಗೆ ಹರಕೆಯನ್ನಿರಿಸಿಕೊಂಡು ವೈದ್ಯರ ಮೊರೆ ಹೋಗಿ ಸೂಕ್ತ ಚಿಕಿತ್ಸೆ ಪಡೆದು, ಸಂಪೂರ್ಣವಾಗಿ ಗುಣಮುಖರಾದರು ಕೂಡ. ಆದರೆ ಅದೇಕೋ..ಏನೋ! ಅತ್ತಿತ್ತ ಅಲೆದಾಡಿ ಸುತ್ತಾಡುತ್ತಿದ್ದ ಸರ್ಪಕ್ಕೆ ಒಂದು ನೆಲೆಯಾಗಬೇಕೆಂದುಕೊಂಡ ಕುಟುಂಬ, ಸ್ವಾಮಿ ದೇವರ ಕೂಡ್ಲುವಿನ ಸ್ವಾಮಿ ದೇವರ ಸನ್ನಿಧಿಯಲ್ಲಿ ನಾಗಪ್ರತಿಷ್ಟೆಯೂ ಕೂಡ ಮಾಡಿದರು. ಆಪತ್ಕಾಲದಲ್ಲಿ ಹೇಳಿಕೊಂಡ ಸಕಲ ಹರಕೆ ಸೇವೆಗಳನ್ನು ಕಾಲಕ್ರಮೇಣ, ಒಂದೊಂದಾಗಿ ನೆರವೇರಿಸುತ್ತಾ ಬಂದ ಹಾಗೆ, ಅಲ್ಲಿಂದ ಇವರ ಕುಟುಂಬಕ್ಕೆ ಹೊಸದೊಂದು ಚೈತನ್ಯದ ಚಿಲುಮೆ ಮೂಡತೊಡಗಿದರೂ ಸಹ, ಮಾರಣಕಟ್ಟೆ ಕ್ಷೇತ್ರಕ್ಕೆ ಬೆಳಕಿನ ಸೇವೆಯಿನ್ನೂ ನೆರವೇರಿಸಬೇಕೆನ್ನುವ ಅಂಶವೊಂದು ಕನಸಿನ ರೂಪದಲ್ಲಿ ಬಂದು ಕುಟುಂಬದ ಗಮನಕ್ಕೆ ಆಗಾಗ್ಗೆ ಗೋಚರಿಸುವಂತೆ ಬರುತ್ತಿತ್ತು.
ಅದೇ ಸಮಯಕ್ಕೆ ಸರಿಯಾಗಿ, ತಮ್ಮ ವಿದ್ಯಾಭ್ಯಾಸವನ್ನು ಒಂದು ಹಂತದವರೆಗೆ ಮುಗಿಸಿ, ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಮರ್ಲಣ್ಣನವರ ಚತುರ್ಥ ಪುತ್ರ ಶ್ರೀ ಜಯರಾಮ (ಪ್ರಸ್ತುತ, ಶ್ರೀ ಕ್ಷೇತ್ರದ ಧರ್ಮದರ್ಶಿಗಳು) ಇವರಿಗೆ, ನಿದ್ದೆಯಲ್ಲಿ ಉಸಿರುಗಟ್ಟಿಸಿದಂತಾಗುವುದು, ಭಯ-ಆತಂಕವೆಲ್ಲಾ ಮನದಿ ಒಮ್ಮೆಲೇ ಆವರಿಸಿದಂತಾಗುವುದು, ಅಗೋಚರ ಶಬ್ಧಗಳ ಆಲಾಪ -ಹೀಗೆ, ಒಂದರ ಮೇಲೊಂದು ಚಿತ್ರ-ವಿಚಿತ್ರ ತಾಪತ್ರಯಗಳು ಗೋಚರಕ್ಕೆ ಬರತೊಡಗಿದವು. ಜನಸಾಮಾನ್ಯರಂತೆ ಕಾರಣ ತಿಳಿಯಲು ಸಹಜವಾಗಿಯೇ ಜ್ಯೋತಿಷಿಯ ಬಳಿ ಅವರು ಸಾಗಿದಾಗ, ನಾನಾ ರೀತಿಯ ವಾಮಾಚಾರ, ಕೃತ್ರಿಮ ದೋಷದ ಪರಿಣಾಮವೇ ಇದೆಲ್ಲಾ ಎಂಬ ಮಾಹಿತಿಯನ್ನರಿತು, ಪರಿಹಾರಕ್ಕೆಂದು ಸಂಬಂಧಪಟ್ಟ ಸಕಲ ಉಚ್ಛಾಟನಾ ಹೋಮವನ್ನು ಕೂಡ ಮೇಲಿಂದ-ಮೇಲೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇವರಿಗೆದುರಾಗಿ ಬಂತು, ಆದರೂ ಕೂಡ, ಅದು ಫಲಕಾರಿಯಾಗಲಿಲ್ಲವೆನ್ನುವಂತೆ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಂಡು ಇಡೀ ಮರ್ಲಣ್ಣನವರ ಸಂಸಾರವನ್ನೇ ಅತೀವವಾಗಿ ಕಾಡಿ, ಸಮಸ್ಯೆಗಳ ಸುಳಿಯಲ್ಲಿ ಒಬ್ಬೊಬ್ಬರನ್ನೇ ಸಿಲುಕಿಸಿತು.

ನಂತರ, ತರ್ಕಕ್ಕೆ ನಿಲುಕದ ಯಾವುದೋ ಒಂದು ಅಗೋಚರ ಶಕ್ತಿಯೊಂದು ಶ್ರೀ ಜಯರಾಮರವರನ್ನು ಆಂತರ್ಯದೊಳಗೆ ಆಗಾಗ್ಗೆ ಸೇರಿ, ಸ್ಥಳ ಮಹಿಮೆಯೋ ಎನ್ನುವಂತೆ ಆಯಾಯ ಸುತ್ತ-ಮುತ್ತಲಿನ ಸ್ಥಳದವರೆಗೂ ಸುತ್ತಾಡಿಸುತ್ತ ಒಂದೆಡೆ ತೇಲಿಸಿ, ಪ್ರಜ್ಞೆ ತಪ್ಪಿಸಿ ತುಸು ಸಮಾಧಾನ ಪಡುವಂತೆ ಮಾಡುತ್ತಿತ್ತು. ಹೀಗಾದಾಗ, ಕೊನೆಯಲ್ಲಿ ಎಲ್ಲರೂ ಸೇರಿ ತಾವು ನಂಬಿದ ಕುಲದೇವರಾದ ಕಟ್ಕೇರೆ ಶ್ರೀ ಮಹಾದೇವಿ ಹಾಗೂ ಹಾಲಾಡಿ ಶ್ರೀ ಅಮ್ಮನವರಲ್ಲಿಯೇ ಮೊರೆ ಇಡಲು ಮುಂದಾದರು. ಶ್ರೀ ಕುಲದೇವರ ಗಂಧ ಪ್ರಸಾದ ಸ್ವೀಕರಿಸುತ್ತಿದ್ದ ಹಾಗೆಯೇ, ಶ್ರೀ ಜಯರಾಮರ ಶರೀರವನ್ನು ಆಗಾಗ್ಗೆ ಆವರಿಸುತ್ತಿದ್ದಂತಹ ಕಾಣದ ಶಕ್ತಿ, “ಆದಿಶಕ್ತಿಯಾದ ಶ್ರೀ ಚೌಡೇಶ್ವರಿ” ಅದಾಗಿತ್ತು. ಶ್ರೀ ಜಯರಾಮರ ಶರೀರವನೇರಿ ಬಂದ ಆದಿಶಕ್ತಿಯಾದ ಶ್ರೀ ಚೌಡೇಶ್ವರಿಯು ತಾನು ಮುಂದಕ್ಕೆ ಈ ಗ್ರಾಮದೇವತೆಯಾಗಿ ಮೆರೆಯಲು ನೆಲೆ ನಿಲ್ಲಬೇಕೆಂದು ತಾನ್ಯಾರು, ಈ ಸಮಸ್ಯೆಗಳ ಸುಳಿಯಲಿ ನೀವು ಸಿಲುಕಲು ಇರುವ ಇತರೇ ಕಾರಣಗಳನ್ನು ತಿಳಿಸಿತು. ಅಲ್ಲದೇ, ತನ್ನ ಜೊತೆಗೆ ತನ್ನ ಸಪರಿವಾರ ಗಣಗಳಿಗೂ ಸಹ ಒಂದು ನೆಲೆಯಾಗಬೇಕೆಂದು ವಾಗ್ಧಾನವನ್ನು ನೀಡಿದಳು. ಅಲ್ಲದೇ, ಆದಷ್ಟು ಬೇಗ ಏರಿಬಂದ ಈ ಕೊರಡಿನ ವಿವಾಹ ಕಾರ್ಯ ಮುಗಿಯುತ್ತಿದ್ದ ಹಾಗೆಯೇ, ಮತ್ತೆ ಶಾಶ್ವತವಾಗಿ ಏರಿ ಬಂದು ನಂಬಿದವರಿಗೆ ಭಕ್ತವತ್ಸಲೆಯಾಗಿ ಪುನಃ ಸಲಹಲು ಬರುವೆನೆಂದು ನುಡಿದು ಮರೆಯಾದಳಂತೆ!

ಮೊದ-ಮೊದಲು ಇದನ್ನೆಲ್ಲಾ ಒಂದು ಮಟ್ಟಕ್ಕೆ ನಂಬಿಯೂ ನಂಬಲಾಗದ ಸ್ಥಿತಿಯನ್ನು ತಲುಪಿದ ಕುಟುಂಬಕ್ಕೆ, ದಿನ ನುಂಗುವ ಕ್ಷಣಗಳ ಮುಂದೆ, ತಮ್ಮ ಇಡೀ ಸಂಸಾರದ ಬದುಕೇ ಬಲಿಯಾಗುತಿವೇಯೋ ಏನೋ ಎನ್ನುವ ಕಳವಳ ಅತೀವವಾಗತೊಡಗಿತು. ಸಾಕಷ್ಟು ನೊಂದ ಬೆಂದು ಹೋದ ಕುಟುಂಬ ಕಟ್ಟಕಡೆಯಲ್ಲಿ, ಸ್ವಾಮಿ ದೇವರ ಕೂಡ್ಲುವಿನಲ್ಲಿ ಆದ ಶ್ರೀ ನಾಗದೇವರ ದರ್ಶನಭಾಗ್ಯದಿಂದ ಹಾಗೂ ಆರೂಢ ಪ್ರಶ್ನೆಯಿಂದ ಅಲ್ಲಿನ ಸರ್ವ ಗ್ರಾಮಸ್ಥರ ಸಮಕ್ಷಮದಲ್ಲಿಯೇ ತಮ್ಮ ಈ ಬದುಕಿನ ಅಡಚಣೆಗಿರುವ ಸತ್ಯ ಸಂಗತಿಯಾದರೂ ಏನು?, ಏತ್ತ?! - ಎನ್ನುವ ವಿಚಾರಗಳೆಲ್ಲಾ ಸಂಪೂರ್ಣ ಗೋಚರಕ್ಕೆ ಬಂದುಬಿಟ್ಟವು. ಅಲ್ಲದೇ, ತಾವು ನೆಲೆಸಿರುವಂತಹ ಸಂಬಂಧಪಟ್ಟಂತಹ ಭೂಮಿ ಮೂಲತಃ, ಜೈನಭೂಮಿಯಾಗಿದ್ದು ಇಲ್ಲಿ ಹಲವು ರೀತಿಯ ದೈವಗಳು ತಮಗೆ ನೆಲೆ ಸಿಗುವವರೆಗೂ ಅತ್ತಿತ್ತ ಅಲೆಮಾರಿಯಂತೆ ಅಲೆದಾಡಿ, ದೃಷ್ಟಿ ಬೀರುತ್ತಿವೆ ಎಂದೆಲ್ಲಾ ಸಂಪೂರ್ಣವಾಗಿ ಅರಿತ ಮೇಲೆಯೇ ಬಲ್ಲವರಲ್ಲಿ ಅನೇಕ ಬಾರಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದರು, ಮರ್ಲಣ್ಣನ ಕುಟುಂಬದವರು. ಶ್ರೀ ದೇವಿಯ ಅಣತಿಯ ನುಡಿಯಂತೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ಜಯರಾಮರವರಿಗೆ ವಿವಾಹ ಕಾರ್ಯ ನೆರವೇರಿ, ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳ ಹಿತನುಡಿಯ ಶುಭಾರ್ಶೀವಾದದೊಂದಿಗೆ, ಸಾಕಷ್ಟು ಕಟ್ಟುಪಾಡು, ನುಡಿ ಅಡಚಣೆಗಳ ನಡುವೆಯೂ ಸಹ, ಶ್ರೀ ಜಯರಾಮರವರ ಮೇಲೆ "ಆದಿಶಕ್ತಿಯಾದ ಶ್ರೀ ಚೌಡೇಶ್ವರಿ ದೇವಿ"ಯು ಸಂಪೂರ್ಣ ಏರಿ ಬಂದು ನುಡಿಯಾನ್ನಡಲು ಮೊದಲು ಅನುವಾಯಿತು. ಮೊದ-ಮೊದಲು ಮನೆಯ ತುಳಸಿ ಕಟ್ಟೆಯ ಭಾಗದಲ್ಲಿ ದೇವಿಯ ದರ್ಶನ ಮಾಡಿ ಕಷ್ಟಗಳನ್ನು ದೂರ ಮಾಡಿ ನೆಮ್ಮದಿಯ ಜೀವನಕ್ಕೆ ಕಾಲಿಡುತ್ತಿದ್ದ ಹಾಗೆಯೇ, ಮತ್ತೆ ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿಕೊಂಡ ಪರಿ. ದಿಕ್ಕೇ ತೋಚದ ಕುಟುಂಬ, ಮತ್ತೇ ನಂಬಿದ ಚೌಡೇಶ್ವರಿಯನ್ನೇ ಪ್ರಶ್ನಿಸಲು ಮುಂದಾದ ರೀತಿ. ಇದ್ದಕ್ಕಿದ್ದ ಹಾಗೆ ಶ್ರೀ ಶನಿದೇವರ ಕಥಾಪ್ರವಚನವನ್ನು ಮಾಡು, ಆಗ ಎಲ್ಲವೂ ಮತ್ತಷ್ಟು ಸರಿಯಾಗಿ ಗೋಚರಕ್ಕೆ ಬರುವಂತೆ ಅನುಗ್ರಹಿಸುವೆನು ಎನ್ನುವ ನುಡಿ ಆ ಶ್ರೀ ಚೌಡೇಶ್ವರೀ ದೇವಿಯದಾಗಿತ್ತು.
ಈಗಾಗಲೇ ಸಾಕಷ್ಟು ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ ಪರಿಣಾಮ, ಕಥಾಪ್ರವಚನವನ್ನು ಆ ತಕ್ಷಣಕ್ಕೆ ಮಾಡಲಾಗದಂತಾಯ್ತು. ಕಾಲ ಮುಂದಕ್ಕೆ ಸರಿದಂತೆಲ್ಲಾ, ಬಾಳಬಂಡಿಯ ಗಾಲಿಚಕ್ರವೇ ಮತ್ತೇ ಅಲ್ಲೋಲ ಕಲ್ಲೋಲವಾಯ್ತು. ಸತತ 2-3 ವರ್ಷಗಳ ಕಾಲ ನಿರಂತರವಾಗಿ ಸಂಕಷ್ಟಗಳ ಸಂಕೋಲೆಯಲ್ಲಿ ಸಿಲುಕಿದ್ರು. ನೊಂದು-ಬೆಂದು ಮನದ-ಬೇಗುದಿಯಿಂದ ಕೊನೆಗೂ ಚೇತರಿಸಿಕೊಳ್ಳಲಾಗದ ಆ ಪರಿಸ್ಥಿತಿ ನಡುವಲ್ಲಿಯೂ ಸಹ, ಸಾಗರದ ಶ್ರೀ ಶನೀಶ್ವರ ಕಥಾ ಚರಿತ್ರೆ ಕೈಸೋಡಿ ಸೊರಬ ತಾಲೂಕು ಕಥಾ ತಂಡದವರಿಂದ ಶನಿದೇವರ ಕಥೆಯನ್ನು 2010ರಲ್ಲಿ ನೆರವೇರಿಸಿದ್ರು. ಆ ಒಂದು ಶುಭದಿನದಂದು, ಶ್ರೀ ಶನೀಶ್ವರನ ಮಹಾತ್ಮೆಯಲ್ಲಿ ಮೈ-ಮನ ನವಿರೇಳಿಸುವ ರಾಜಾ ವಿಕ್ರಮನ ಕಥಾಭಾಗ ಪ್ರವಚನ ನಡೆಯುತ್ತಿದ್ದ ಆ ಸಮಯ. ಅಧಿಕಾರದ ಗರ್ವದಲ್ಲಿ ತನ್ನನ್ನು ಅಪಹಾಸ್ಯದಿಂದ ನಕ್ಕು-ಗೇಲಿಗೈದು ಅವಮಾನಿಸಿದ ವಿಕ್ರಮಾದಿತ್ಯನಿಗೆ ತಕ್ಕ ಶಿಕ್ಷೆ ನೀಡಬೇಕೆಂದುಕೊಂಡ ಶನಿ ದೇವರು, "ನಿನ್ನ ಗರ್ವವನ್ನಡಗಿಸಿದೆ ಇರಲಾರೆ! ನನ್ನ ಸಾಮಾಥ್ರ್ಯವನ್ನಾಗ ನೀನು ನೋಡುವಿಯಂತೆ" ಎಂದು ರಾಜಾ ವಿಕ್ರಮನಿಗೆ ಕನ್ಯಾರಾಶಿ ಪ್ರಾಪ್ತವಾಗುತ್ತಿದ್ದ ಹಾಗೆಯೇ ಅಟ್ಟಹಾಸದಿಂದ ಮೆರೆಯುತ್ತ ತನ್ನ ವಕ್ರದೃಷ್ಟಿಯನ್ನು ರಾಜಾ ವಿಕ್ರಮನತ್ತ ಬೀರುತ್ತಲೇ ಕಾಕವಾಹನನಾಗಿ ಏರಿಬರುವಂತಹ ಆ ಮೊದಲ ಹೊತ್ತಿಗೆ ಹಾಗೂ, ನಿಂದಿಸಿ ಹಳಿದ ಪರಿಣಾಮ ಶನಿಪೀಡಿತನಾಗಿ ತಕ್ಕ ಶಿಕ್ಷೆಯನ್ನನುಭವಿಸಿ ಕೊನೆಗೆ ಬೆಂಬಿಡದೇ ಕಾಡಿದ ಆ ಶನಿದೇವನ ಪಾದಾರವಿಂದಕ್ಕೆ ಶಿರಬಾಗಿ ಮಣಿಯುತ್ತಾ ಕರಜೋಡಿಸಿ ಕರುಣೆ ನೀ ತೋರಿಸು ಎನಗೆ ಈಗೆಂದು ಕಣ್ಣೀರನ್ನಿಡುವಂತಹ ವಿಕ್ರಮಾದಿತ್ಯನ ಆ ಕರುಣಾಜನಕ ಪರಿಸ್ಥಿತಿ ವರ್ಣೀಸಿರುವಂತಹ ಆ ಕಥಾಭಾಗ ಮುಗಿಯುವ ಇವೆರಡೂ ಸಂದರ್ಭ, ಶ್ರೀ ಜಯರಾಮರವರ ಮೇಲೆ ಒಂದೇ ಸಮನೇ ಘೋರ ರೂಪದಲ್ಲಿ ಅಬ್ಬರಿಸುತ್ತಾ ಮತ್ತೆ ಪ್ರಜ್ಞೆ ತಪ್ಪಿ ಮತ್ತದೇ ಅಬ್ಬರದಲ್ಲಿ ಎದ್ದು ಕಾಣುವ ಆ ವಿವಿಧ ಭಾವ-ಭಂಗಿಯ ತಾಂಡವ ಲೀಲೆ ನಿಜಕ್ಕೂ, ಅಂದು ಅಲ್ಲಿ ನೆರೆದವರಿಗೆಲ್ಲಾ ವಿಸ್ಮಯ-ವಿಚಿತ್ರ! ಶನಿದೇವನೂ ಇವರ ಮೇಲೆ ಏರಿ ಬರುವಂತಿದೆಯೆಲ್ಲಾ ಎನ್ನುವ ಪಿಸುಮಾತು ಅಲ್ಲಲ್ಲಿ ನೆರೆದ ಜನಸಮೂಹಗಳ ನಡುವೆ ನಡೆಯುತ್ತಿತ್ತು!

ನಿಜಕ್ಕೂ, ಅವರ ಪಿಸುಮಾತು ಸತ್ಯವಾಗುವುದೇ ಎನ್ನುವ ಶೋಧನೆಯಲ್ಲಿ ಮುಂದಕ್ಕೆ ಸಾಗಿದ ಇವರ ಕುಟುಂಬಕ್ಕೆ, ನಿಜಸಂಗತಿ ಹೌದೆಂದು ತಿಳಿದ ಆ ಪರಿ. ನಿಜವಾಗಿಯೂ ತಮಗೆ ಇದನ್ನೆಲ್ಲಾ ನಿಭಾಯಿಸಿಕೊಂಡು ಹೋಗುವ ಶಕ್ತಿ, ಸಾಮಥ್ರ್ಯವಿದೆಯೇ ಎನ್ನುವ ಗೊಂದಲದಲ್ಲಿಯೇ ಕೈಯನ್ನು ಸಡಿಲ ಬಿಡುತ್ತ ಬಂದಂತಹ ಕುಟುಂಬ ಮತ್ತೇ ಆ ನಂಬಿಕೆಯನ್ನು ದೂರ ಸರಿಸುತ್ತಾ ಹೋದ ಆ ಕ್ಷಣ, ಇವರ ಕೈಹಿಡಿಯುವುದನ್ನು ಸಹ ಆ ಶನಿದೇವ ಬಿಟ್ಟು ಬಿಟ್ಟಂತೆ; ಬೆಂಬಿಡದೇ ಕೆಲಕಾಲ ಕಾಡತೊಡಗಿದಂತೆ ಕಂಡುಬಂದ ಬಗೆ ಅದಾಗಿತ್ತು. ಆ ದೇವರು ಆಯುಷ್ಯದ ಜೊತೆಗೆ, ಆರೋಗ್ಯವನ್ನೂ ಸಹ ಸರಿಸಮನಾಗಿ ನೀಡಿದ್ದರೇ, ಈ ಬದುಕು ನಿಜಕ್ಕೂ ತಮಗೆ ಭಾರವೆನಿಸುವುದಿಲ್ಲವಾಗಿತ್ತು ಎಂಬ ಬೇಸರದಲ್ಲಿಯೇ ಇದ್ದ ಕುಟುಂಬ ಕೊನೆಗೆ, ಜೋಯಿಸರ ಉಪದೇಶದಂತೆ, ಸಂಕಷ್ಟಗಳ ನಡುವೆಯೂ ಸಹ ಸೋತು ಸುಣ್ಣವಾಗಿ, ಎಲ್ಲವನ್ನೂ ಆ ಭಗವಂತನ ಇಚ್ಛೆಯೆಂಬಂತೆ ತಿಳಿದು, ಅವನ ಕರುಣೆಗಾಗಿ ಕಾದು-ಕಾದು ಕುಳಿತಲ್ಲಿಯೇ, 48 ದಿನಗಳ ಕಾಲ ಚೌಡೇಶ್ವರೀ ಹಾಗೂ ಶನಿದೇವರ ಜಪವನ್ನು ಶ್ರೀ ಜಯರಾಮರು ಸಾಂಗವಾಗಿ ಎಡೆಬಿಡದೇ ಜಪಿಸಿದರು.

“ಕಾಲಾಯೈ ತಸ್ಮೈ ನಮಃ” - ಕಾಲಚಕ್ರ ತಿರುಗಿದಂತೆ ಎಲ್ಲವೂ ಬದಲಾಗುವುದು ಎನ್ನುವಂತೆ ಅಂತಿಮಘಟ್ಟದಲ್ಲಿ, ಈ ಹಿಂದೆ ಶ್ರೀ ಶನೀಶ್ವರ ದೇವರ ಪೋಟೋ ಮತ್ತು ಕಳಸವನ್ನು ಸ್ಥಾಪಿಸಿ ಇದೀಗ ಶ್ರೀ ಜಯರಾಮರವರು ಶ್ರೀ ಚೌಡೇಶ್ವರೀ ದೇವಿ ಹಾಗೂ ಶ್ರೀ ಶನಿದೇವರ ದರ್ಶನ ಪಾತ್ರಿಯಾದರು. ಅಲ್ಲದೇ, ಅವರ ಮುಡಿ ಕ್ರಮೇಣ ಜಡೆಯಾಗಿ ಮಾರ್ಪಟ್ಟಿತು. ಇನ್ನೇನು ಬದುಕು ಏನು ಎನ್ನುವಂತದ್ದು ಅರಿವಾಗುವ ಮುನ್ನವೇ, ಮುಗಿದೇ ಹೋಯಿತೇನೋ ಇಲ್ಲಿಗೆ ಎಂದುಕೊಂಡ ಮರ್ಲಣ್ಣನವರ ಕುಟುಂಬದಲ್ಲಿನ ಸಮಸ್ಯೆ-ಸ್ಥಿತಿಗತಿಗಳೆಲ್ಲವೂ ಸಹ, ಒಂದೊಂದಾಗಿ ಸಕಲ ರೀತಿಯಲ್ಲೂ ಒಂದು ಹಂತಕ್ಕೆ ತಲುಪಿ, ಸುಧಾರಿಸುತ್ತಾ ಬರತೊಡಗಿದವು.